13/01/2026
ಗೊರೂರು ಗ್ರಾಮದ ಶ್ರೀ ಚೇತನ ಆಂಗ್ಲಮಾಧ್ಯಮ ಶಾಲೆಯ 40ನೇ ವರ್ಷದ ಶಾಲಾ ವಾರ್ಷಿಕೋತ್ಸವ “ಚೇತನೋತ್ಸವ” ಕಾರ್ಯಕ್ರಮವು ದಿನಾಂಕ 03-01-2026 ರಂದು ಸಂಜೆ 6.00 ಗಂಟೆಗೆ ಸಂತೆ ಮೈದಾನದ ಬಯಲು ರಂಗಮಂದಿರದಲ್ಲಿ ಭವ್ಯವಾಗಿ ನೆರವೇರಿತು.
ಕಾರ್ಯಕ್ರಮವನ್ನು ಕಿಮ್ಸ್, ಹಾಸನದ ಮಾಜಿ ನಿರ್ದೇಶಕರಾದ ಡಾ. ರವಿಕುಮಾರ್ ಬಿ.ಸಿ. ಅವರು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಗೊರೂರು ಠಾಣೆಯ ಉಪಠಾಣಾಧಿಕಾರಿ ಶ್ರೀ ಧನರಾಜ್ ಹಾಗೂ ಬನವಾಸೆಯ ಶ್ರೀ ಬಿ.ಕೆ. ರುದ್ರಪ್ಪ ಅವರು ವಿಶೇಷವಾಗಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಂಜೇಗೌಡ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿಂಗರಾಜು, ಉಪಾಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಹೇಮರಾಜು, ಹಾಗೂ ಅಬಾಕಸ್ ಫೌಂಡೇಶನ್, ಹಾಸನ ಸಂಸ್ಥೆಯ ಶ್ರೀ ಗಿರೀಶ್ ಶೆಣೈ ಮತ್ತು ಶ್ರೀಮತಿ ಸಂಗೀತಾ ಶೆಣೈ ಇವರು ಭಾಗವಹಿಸಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ, ವಿದ್ಯಾಭ್ಯಾಸ ಹಾಗೂ ಕಲೆ–ಕ್ರೀಡಾ ಕ್ಷೇತ್ರಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ದಿವಂಗತ ಶ್ರೀ ಗೋವಿಂದೇಗೌಡ ಮತ್ತು ದಿವಂಗತ ಶ್ರೀಮತಿ ದ್ಯಾವಮ್ಮ ಇವರ ಸ್ಮರಣಾರ್ಥವಾಗಿ ಆಯೋಜಿಸಲಾದ “ಸಾಧಕರ ಸನ್ಮಾನ” ಕಾರ್ಯಕ್ರಮದಲ್ಲಿ, ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ KIMS, ಬೆಂಗಳೂರು ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಪೂರ್ಣೇಶ್ಗೌಡ (MS Orthopedics) ಅವರಿಗೆ ಸನ್ಮಾನ ಸಲ್ಲಿಸಲಾಯಿತು. ವೈಯಕ್ತಿಕ ಕಾರಣಗಳಿಂದ ಡಾ. ಪೂರ್ಣೇಶ್ಗೌಡ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ, ಅವರ ಪರವಾಗಿ ಅವರ ತಾಯಿ ಶ್ರೀಮತಿ ಜಾನಕಿ ಅವರು ಸನ್ಮಾನ ಸ್ವೀಕರಿಸಿದರು.
ಸಭೆಯಲ್ಲಿ ಮಾತನಾಡಿದ ಡಾ. ರವಿಕುಮಾರ್ ಬಿ.ಸಿ. ಅವರು ತಮ್ಮ ಕಾಲದ ಶಿಕ್ಷಣ ಪದ್ಧತಿಯನ್ನು ಸ್ಮರಿಸಿ, “ಹಳೆಯ ಕಾಲದಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವ ಇತ್ತು. ಈಗ ಮಕ್ಕಳಿಗೆ ತರಾಟೆ ಹೇಳಿದರೆ ಕೆಲವರು ಮನೆಗೆ ಹೋಗಿ ತಮ್ಮ ಕೊಠಡಿಗಳ ಬಾಗಿಲು ಹಾಕಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿಯೂ ಕಂಡುಬರುತ್ತಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಉಪಠಾಣಾಧಿಕಾರಿ ಶ್ರೀ ಧನರಾಜ್ ಅವರು ಪೋಷಕರಿಗೆ ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆ ನೀಡುತ್ತಾ, “ಮಕ್ಕಳಿಗೆ ಮೊಬೈಲ್ ನೀಡುವುದನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ. ಇಂದಿನ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳಿದ್ದು, ಇದರಿಂದ ಸೈಬರ್ ಅಪರಾಧಗಳ ಅಪಾಯ ಹೆಚ್ಚುತ್ತಿದೆ” ಎಂದು ತಿಳಿಸಿದರು.
ಅದೇ ರೀತಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಹೇಮರಾಜು ಅವರು ಮಾತನಾಡಿ, “ಒಬ್ಬ ಮಗುವನ್ನು ಮನೆಯೊಳಗೆ ನಿಯಂತ್ರಿಸುವುದೇ ಪೋಷಕರಿಗೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ, ನೂರಾರು ಮಕ್ಕಳನ್ನು ಶಿಸ್ತುಬದ್ಧವಾಗಿ ರೂಪಿಸುವ ದೊಡ್ಡ ಜವಾಬ್ದಾರಿಯನ್ನು ಶಿಕ್ಷಕರು ಅತ್ಯಂತ ಸಹನೆಯಿಂದ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ಕೆ.ಜಿ. ಸ್ವಾಮಿಗೌಡ (ಮುಖ್ಯೋಪಾಧ್ಯಾಯರು) ಹಾಗೂ ಶ್ರೀಮತಿ ಶೈಲಾ ಬಿ.ಬಿ. (ಕಾರ್ಯದರ್ಶಿ, ಶ್ರೀ ಚೇತನ ವಿದ್ಯಾಸಂಸ್ಥೆ (ರಿ.)) ಅವರೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಮಹತ್ವದ ಪಾತ್ರವಹಿಸಿದರು.
ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.