01/08/2023
ಇಂದು ವಿಶ್ವ ಹುಲಿ ದಿನಾಚರಣೆ.
ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ, ಅನಾದಿ ಕಾಲದಿಂದಲೂ ಕಾಡಿನ ರಾಜ, ವ್ಯಾಘ್ರ ಎಂದೆಲ್ಲಾ ಕರೆಯಲ್ಪಡುವ ಹುಲಿಗೆ ತನ್ನದೆ ಆದ ಇತಿಹಾಸವಿದೆ. ಅನೇಕ ದೇಶಗಳ ಬಾವುಟಗಳಲ್ಲಿ ಹಾಗೂ ನಾವು ಆರಾಧಿಸುವ ದೇವಾನು ದೇವತೆಗಳ ಪಕ್ಕದಲ್ಲಿ ಹುಲಿರಾಜನಿಗೆ ಸ್ಥಾನವನ್ನು ನೀಡಿ ಗೌರವಿಸುತ್ತಾ ಬಂದಿದ್ದೇವೆ. ಅದೇ ಪ್ರಕಾರ ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆ ದೇಶದಲ್ಲಿಯೇ ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ವಿಶ್ವ ಹುಲಿ ದಿನಾಚರಣೆಯ ಈ ದಿನದಂದು ರಾಜ್ಯದ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಲ್ಲಿ ಹುಲಿಗಳನ್ನು ಸಂರಕ್ಷಣೆ ಮಾಡುತ್ತಿರುವ ನಮ್ಮ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಾನು ಕಳೆದ ಕೆಲವು ವರ್ಷಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕುಟುಂಬ ಸಮೇತ ಭೇಟಿ ನೀಡಿ. ಅಲ್ಲಿ ಆಗತಾನೆ ಜನಿಸಿರುವ ಮೂರು ಹುಲಿ ಮರಿಗಳನ್ನು ದತ್ತು ಪಡೆದಿರುವೆ. ಅವುಗಳಲ್ಲಿ ಒಂದು ಗಂಡು ಹುಲಿ, ಎರಡು ಹೆಣ್ಣು ಹುಲಿಗಳಿವೆ. ಗಂಡು ಹುಲಿಗೆ ಶಿವ, ಹೆಣ್ಣು ಹುಲಿಗಳಿಗೆ ಆರುಣ್ಯ, ಶಾಂಭವಿ ಎಂದು ನಾಮಕರಣ ಮಾಡಿ, ದತ್ತು ಪಡೆದಿರುವುದು ನಮ್ಮ ಕುಟುಂಬದ ಪುಣ್ಯ ಎಂದೇ ಭಾವಿಸುತ್ತೇನೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ವಿಶ್ವ ಹುಲಿ ದಿನಾಚರಣೆಯ ಸಂದರ್ಭದಲ್ಲಿ ಅವಕಾಶ ದೊರಕಿದೆ.
ಹುಲಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ನೀಡಲಿ ಎಂದು ಆಶಿಸುತ್ತೇನೆ.
- ಗಾಲಿ ಜನಾರ್ಧನ ರೆಡ್ಡಿ.