26/07/2026
"ಅಕ್ಟೋಬರ್ ಬಹಳ ಆಹ್ಲಾದಕವಾದ ತಿಂಗಳು. ಹವಾಮಾನ ಅನುಕೂಲಕರವಾಗಿದ್ದು, ಖಂಡಿತವಾಗಿಯೂ ಕಾಂಚನಜುಂಗಾ ಶಿಖರ ಆರಾಮಾಗಿ ನೋಡುವುದಕ್ಕೆ ಸಿಗುತ್ತದೆ" ಅಂತ ಗೂಗಲ್ ಹೇಳಿದ್ದನ್ನು ನಂಬಿ, ಸಿಕ್ಕಿಂನ ಪೆಲ್ಲಿಂಗ್ ಅನ್ನುವ ಜಾಗಕ್ಕೆ ಹೊರಟೆವು. ನಮ್ಮ ಪ್ರಯಾಣದ ಪಟ್ಟಿಯಲ್ಲಿ ಇದ್ದಿದ್ದು ಪೆಲ್ಲಿಂಗ್ ಮತ್ತು ಯುಕ್ಸಾಮ್. ಬಹುತೇಕ ಪ್ರವಾಸಿಗರು ಗ್ಯಾಂಗ್ಟಕ್ಕಿಗೆ ಭೇಟಿ ಕೊಡುತ್ತಾರೆ. ಆದರೆ, ನಮಗೆ ಜನಜಂಗುಳಿಯ ಗಲಾಟೆ, ಪ್ರವಾಸದ ಥಳುಕು ಬಳುಕು ಬೇಕಿರಲಿಲ್ಲ. ಇತಿಹಾಸ, ಆಧ್ಯಾತ್ಮಿಕತೆ ಹಾಗೂ ಪ್ರಶಾಂತ ಪ್ರಕೃತಿಯ ಜೊತೆ ಜೊತೆಗೆ ಕತೆಗಳು ಹಾಗೂ ಅನುಭವಗಳು ಬೇಕಿದ್ದವು. ಇವಿಷ್ಟು ಜಾಗವನ್ನು ನೋಡಿದೆವು ಅಂತ ಗುರುತು ಹಾಕಿಕೊಳ್ಳುವ ಇರಾದೆ ಖಂಡಿತಾ ಇರಲಿಲ್ಲ. ಹಾಗಾಗಿ, ಎಲ್ಲರೂ ಹೆಚ್ಚಾಗಿ ಹೋಗುವ ಜಾಗವನ್ನು ಬಿಟ್ಟು, ಅಷ್ಟಾಗಿ ಹೋಗದ ಜಾಗವನ್ನು ಆಯ್ಕೆಮಾಡಿಕೊಂಡಿದ್ದೆವು. ದಕ್ಷಿಣ ಭಾರತದಿಂದ ಉತ್ತರಕ್ಕೆ ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ ಈಶಾನ್ಯ ಭಾರತಕ್ಕೆ ಹೋಗುತ್ತಿರುವುದು ಇದೇ ಮೊದಲ ಸಲ. ಅಷ್ಟಾಗಿ ಅಲ್ಲಿನ ಭಾಷೆ ಕೂಡಾ ಬರದ ಸ್ಥಿತಿ. ಮಳೆಗಾಲದ ಸಮಯದಲ್ಲಿ ಅಲ್ಲಿ ಹೋದರೆ, ಗುಡ್ಡಕ್ಕೆ ಗುಡ್ಡವೇ ಕುಸಿದು ಬೀಳುತ್ತದೆ. ಭೂಕಂಪ, ಭೂಕುಸಿತ ನಿತ್ಯದ ಬದುಕು, ಹಾಗಾಗಿ ಮಳೆಗಾಲ ಮುಗಿದ ಮೇಲೆಯೇ ಹೋಗಬೇಕು ಅಂದಿದ್ದು ಕೂಡಾ ಗೂಗಲ್ಲು. ಪಶ್ಚಿಮ ಬಂಗಾಳದಿಂದ ಸಿಕ್ಕಿಂನ ಗಡಿಯನ್ನು ದಾಟಿದ ಕೂಡಲೇ ಅದೆಂಥಾ ಬದಲಾವಣೆ. ೪೦ ಡಿಗ್ರಿಯಷ್ಟಿದ್ದ ಉಷ್ಣಾಂಶ ಒಂದೇ ಸಲಕ್ಕೆ ತಂಗಾಳಿಗೆ ಬದಲಾಯಿತು. ಸಿಲಿಗುರಿಯ ರಸ್ತೆಯುದ್ದಕ್ಕೂ ತುಂಬಿದ್ದ ಧೂಳು, ಸಿಕ್ಕಿಂನ ಗಡಿಯೊಳಗೆ ಹಸಿರು ನೆರಳಾಗಿತ್ತು. ಪಶ್ಚಿಮ ಬಂಗಾಳದ ಗಡಿಯ ಕೊನೆ ಕೊನೆಗೆ, ಗಾಡಿ ಅಸ್ತವ್ಯಸ್ತ ಜೋಕಾಲಿಯಾಗಿತ್ತು. ಆದರೆ, ಸಿಕ್ಕಿಂ ಅನ್ನು ಪ್ರವೇಶಿಸಿದ ಕೂಡಲೇ, ಅದೆಷ್ಟು ವ್ಯತ್ಯಾಸ!
ಲೆಕ್ಕಕ್ಕೆ ಪ್ರಯಾಣ ಐದು ದಿನದ್ದಾದರೂ, ಮೊದಲ ಮತ್ತು ಕೊನೆಯ ದಿನಗಳು ಪೂರ್ತಿಯಾಗಿ ಹೋಗಿ ಬರುವುದಕ್ಕೆ ಮೀಸಲಾಗಿದ್ದವು. ಹಾಗಾಗಿ, ಕೇವಲ ಮೂರು ದಿನಗಳು ಮಾತ್ರ ಪೆಲ್ಲಿಂಗ್ ಮತ್ತು ಯುಕ್ಸಾಮಲ್ಲಿ ಉಳಿದುಕೊಳ್ಳುವುದಕ್ಕೆ, ಅಲ್ಲಿನ ಜಾಗಗಳನ್ನು ನೋಡುವುದಕ್ಕೆ ಸೀಮಿತವಾಗಿದ್ದವು. ಪೆಲ್ಲಿಂಗಿನ ಮೊದಲ ದಿನ ಅಲ್ಲಿನ ಜಾಗಗಳನ್ನೆಲ್ಲಾ ಬಹುತೇಕ ನೋಡಿದೆವು. ಮೋಡ ತುಂಬಿತ್ತು, ಕಾಂಚನಜುಂಗಾ ಕಾಣಿಸುವ ಯಾವ ಲಕ್ಷಣವೂ ಇರಲಿಲ್ಲ. ಸ್ಥಳೀಯರನ್ನು ಕೇಳಿದಾಗ, ಇಲ್ಲಿಂದ ಕಾಣುವುದು ನಿಜ; ಆದರೆ, ಈ ಮೋಡದ ಸಮಯದಲ್ಲಿ ಕಾಣುವುದು ಅನುಮಾನ. ನೀವು ಇನ್ನೂ ಸ್ವಲ್ಪ ತಡವಾಗಿ ಬಂದಿದ್ದರೆ, ಆಕಾಶ ಮತ್ತಷ್ಟು ಸ್ಪಷ್ಟವಾಗಿರುತ್ತಿತ್ತು, ಆಗ ಬಹುಶಃ ಸಿಗ್ತಿತ್ತೇನೋ ಅಂದರು. ಅದರ ಜೊತೆಗೆ, ಒಬ್ಬ ವಿದೇಶಿ ಪ್ರವಾಸಿಗನ ಕತೆಯನ್ನೂ ಹೇಳಿದರು. ಕಾಂಚನಜುಂಗಾ ನೋಡಬೇಕು ಅಂತ ಮೊದಲಿಗೆ ಹತ್ತು ದಿನ ಉಳಿಯಲಿಕ್ಕೆ ಬಂದವನು, ಆಮೇಲೆ ದಿನಗಳು ಮುಗಿದರೂ ಶಿಖರ ಕಾಣದಿದ್ದಾಗ, ಹದಿನೈದು ದಿನಗಳವರೆಗೆ ಇದ್ದುಹೋದನಂತೆ. ಅವನು ಹೋಗುವವರೆಗೂ ಕಾಂಚನಜುಂಗಾ ಕಾಣಲೇ ಇಲ್ಲ. ಆದರೆ, ಅವನು ಹೋದ ಮರುದಿನವೇ ಕಂಡಿತಂತೆ. ನೀವು ಅದೃಷ್ಟವಂತರಾಗಿದ್ದರೆ ಮಾತ್ರ ಶಿಖರ ಕಾಣುವುದು, ಇಲ್ಲದಿದ್ದರೆ ಇಲ್ಲ ಅಂದರು. ಆದರೆ, ನಮಗೆ ಹಾಗೆ ಹೆಚ್ಚುವರಿ ದಿನಗಳನ್ನು ಕಳೆಯುವ ಯಾವ ಆಯ್ಕೆಗಳೂ ಇರಲಿಲ್ಲ. ಕಾಂಚನಜುಂಗಾ ಕುರಿತಾಗಿ ಅದೇನೋ ತೀವ್ರ ಆಸಕ್ತಿ. ಬಹಳ ಪಂಥಗಳಿಗೆ ಅದು ಪವಿತ್ರ ಪರ್ವತ. ಜಗತ್ತಿನ ಅತೀ ಎತ್ತರದ ಶಿಖರಗಳಲ್ಲಿ ಅದಕ್ಕೆ ಮೂರನೇ ಸ್ಥಾನ. ಈ ಶಿಖರದ ಕುರಿತಾಗಿ ಇರುವ ಧಾರ್ಮಿಕ ಭಾವನೆಯೂ ಈ ಕುತೂಹಲಕ್ಕೆ ಜೊತೆಯಾಗಿತ್ತು. ಪೆಲ್ಲಿಂಗಿನಲ್ಲಿ ಒಂದು ದಿನ ಕಳೆಯಿತು. ಬೆಳಿಗ್ಗೆಯಾದರೆ ಯುಕ್ಸಾಮ್ ಕಡೆಗೆ ಹೊರಡಬೇಕು. ಯುಕ್ಸಾಮ್ ಇಂದ ಕಾಂಚನಜುಂಗಾ ಕಾಣುವುದಿಲ್ಲ. ಬಹುಶಃ ಈ ಸಲ ಪರ್ವತವನ್ನು ನೋಡುವ ಭಾಗ್ಯ ನಮ್ಮ ಹಣೆಯಲ್ಲಿ ಬರೆದಿಲ್ಲ ಅಂತ ನಮ್ಮನ್ನು ನಾವೇ ಸಮಾಧಾನ ಮಾಡಿಕೊಂಡೆವು.
ಮರುದಿನ ಬೆಳಿಗ್ಗೆ ಹೊರಡುವ ದಿನ. ಚಳಿ, ಮೋಡ. ಸೂರ್ಯ ಇನ್ನೂ ಬೆಚ್ಚಗೆ ಮಲಗಿದ್ದ ತನ್ನದೊಂದು ಕರ್ತವ್ಯ ಇದೆ ಅನ್ನುವುದೇ ಮರೆತುಹೋದವರಂತೆ. ನಮ್ಮನ್ನು ಕರೆದುಕೊಂಡು ಹೋಗುವ ಕಾರು ಬರುವುದಕ್ಕೆ ಇನ್ನೂ ಸಮಯವಿತ್ತು. ಆಗಷ್ಟೇ, ನಾವು ಹೊರಡುವುದಕ್ಕೆ ತಯಾರಾಗಿ ಕೂತಿದ್ದೆವು. ಇದ್ದಕ್ಕಿದ್ದ ಹಾಗೆ, ನಮ್ಮ ವಾಸ್ತವ್ಯದ ಮಾಲಿಕರು ಮೇಲೆ ಹೋಗಿ ನೋಡಿ ಅಂದರು. ಅಲ್ಲೊಂದು ವೀಕ್ಷಣಾ ಗೋಪುರದ ಥರ ಇತ್ತು. ಅದನ್ನು ಹತ್ತಿ ಹೋದೆವು. ಬಿಳಿಯ ಮೋಡಗಳ ಚಪ್ಪರದ ಕೆಳಗೆ, ಶ್ವೇತ ವರ್ಣದ ಭಸ್ಮವನ್ನು ಮೈಗೆಲ್ಲಾ ಬಳಿದುಕೊಂಡು ನಿಂತಂತೆ ದೂರದಲ್ಲಿ ಕಾಣುತ್ತಿತ್ತು ಕಾಂಚನಜುಂಗಾ. ನಿಧಾನಕ್ಕೆ ಸುತ್ತಲೂ ಆವರಿಸಿಕೊಂಡಿದ್ದ ಮೋಡಗಳು ಕರಗಿ ಅಸ್ಪಷ್ಟ ರೂಪ ಚೂರು ಚೂರೇ ಸ್ಪಷ್ಟವಾಗತೊಡಗಿತು. "ನೋಡಿ, ನಾನಿಲ್ಲಿ ಅಗಾಧವಾಗಿ ನಿಂತಿದ್ದೇನೆ, ಅದೆಷ್ಟು ನೋಡಬೇಕೋ ನೋಡಿಕೊಳ್ಳಿ" ಅಂತ ನಮಗೋಸ್ಕರವೇ ಕಾಂಚನಜುಂಗಾ ತನ್ನ ವಿರಾಟ್ ಸ್ವರೂಪದ ಅಂಶ ಮಾತ್ರವನ್ನು ತೋರಿದಂತೆ ಭಾಸವಾಯಿತು. ನೀವು ನನ್ನನ್ನು ಪೂರ್ತಿಯಾಗಿ ನೋಡಿ ಕೃತಾರ್ಥರಾಗುವುದಕ್ಕೆ ಇನ್ನೊಮ್ಮೆ ಬರಬೇಕು ಅಂತ ಕರೆದ ಸೂಚನೆಯಂತೆ ಕಂಡಿತು. ಕಂಗಳು ತಂತಾನೇ ತುಂಬಿಬಂದವು. ಅಷ್ಟೇ, ಮತ್ತೈದು ನಿಮಿಷಕ್ಕೆ ಮೋಡಗಳು ಆವರಿಸಿಕೊಂಡವು. ಕಾಂಚನಜುಂಗಾ ನಮಗೆ ಕಂಡಿದ್ದೇ ಕನಸು ಅನ್ನುವ ಹಾಗೆ. ಒಂದು ವೇಳೆ ನಾವು ತಯಾರಾಗುವುದಕ್ಕೆ ತಡವಾಗಿದ್ದರೆ? ಒಂದು ವೇಳೆ ನಾವು ಇನ್ನೂ ಬೇಗ ಹೊರಟಿದ್ದರೆ? ಒಂದು ವೇಳೆ ನಾವು ಚೂರು ಆಲಸಿಗಳಂತೆ ವರ್ತಿಸಿದ್ದರೆ? ಈ ಎಲ್ಲಾ ಪ್ರಶ್ನೆಗಳು ಮನಸ್ಸಿಗೆ ಬಂದಾಗಲೆಲ್ಲಾ, ಈಗಲೂ ರೋಮಾಂಚನವಾಗುತ್ತದೆ. ಅಂದಿನಿಂದ ಸೃಷ್ಟಿಯ ಸೋಜಿಗವೆಲ್ಲವೂ ಇನ್ನಷ್ಟು ದೈವಿಕವಾಗಿ ಕಾಣತೊಡಗಿದವು. ಬದುಕಿಗೆ ಕೃತಜ್ಞರಾಗದೇ ಇರುವುದಕ್ಕೆ ಸಾಧ್ಯವೇ? ಮತ್ತೆ ಮತ್ತೆ ಕಾಂಚನಜುಂಗಾ ದೂರದಿಂದಲೇ ತನ್ನ ಮಮತೆಯ ಬಾಹುಗಳನ್ನು ಚಾಚಿದಂತೆ, ದೈತ್ಯ ರೂಪವಿದ್ದರೂ ಕಾರುಣ್ಯದ ಕಣ್ಣುಗಳಿಂದ ವಾತ್ಸಲ್ಯ ಹೊರಸೂಸಿದಂತೆ, ನಂಬಿ ಬಂದಿದ್ದೀರಿ, ನಿರಾಸೆಯಿಂದ ಹಿಂದಿರುಗಲಾರಿರಿ ಅಂತೆಲ್ಲಾ ಅಂದಂತೆ ಅನಿಸುತ್ತದೆ. ದೇವರು ಇದ್ದಕ್ಕಿದ್ದಂತೆ ದರ್ಶನ ಕೊಟ್ಟರೆ ಹೇಗಿರುತ್ತದೆ ಅನ್ನುವುದಕ್ಕೆ ಉದಾಹರಣೆಯಾಗಿ ಕಾಂಚನಜುಂಗಾ ಕಂಡಿದ್ದು ನೆನಪಾಗುತ್ತದೆ.
~`ಶ್ರೀ'
ತಲಗೇರಿ