25/03/2023
ಕೋರ್ಟಿನಿಂದ ತಪ್ಪಿತಸ್ಥನೆಂದು ಘೋಷಣೆಯಾಗಿ, ಲೋಕಸಭೆಯ ಸದಸ್ಯತ್ವ ರದ್ದಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲು ಎಂಬಂತೆ ರಾಹುಲ್ ಗಾಂಧಿಯವರ ಅನುಯಾಯಿಗಳು, ಕಾಂಗ್ರೆಸ್ ಕಾರ್ಯಕರ್ತರು ಬೊಬ್ಬಿರಿಯುತ್ತಿದ್ದಾರೆ. ಅಲ್ಲದೆ ಇದಕ್ಕೆಲ್ಲ ಮೋದಿಯೇ ಕಾರಣ, ಈಗಿನ ಕೇಂದ್ರ ಸರಕಾರವೇ ಕಾರಣ, ಸಂವಿಧಾನವನ್ನು ಕತ್ತು ಹಿಚುಕಿ ಕೊಲೆ ಮಾಡಲಾಗಿದೆ ಎಂದೂ ದೂರುತ್ತಿದ್ದಾರೆ. ಆದರೆ ವಾಸ್ತವ ತದ್ವಿರುದ್ಧವಾಗಿದೆ. ಮೊದಲನೆಯದಾಗಿ, ಮೊದಲ ಬಾರಿಗೆ ಕೋರ್ಟಿನಿಂದ ಶಿಕ್ಷೆಗೊಳಗಾಗಿ ತನ್ನ ಹುದ್ದೆಯ ಅಧಿಕಾರವನ್ನು ಕಳೆದುಕೊಂಡ ಶ್ರೇಯಸ್ಸು ರಾಹುಲರ ಅಜ್ಜಿಯದು. ಎರಡನೆಯದಾಗಿ, ಈಗ ರಾಹುಲರಿಗೆ ಶಿಕ್ಷೆ ಘೋಷಣೆಯಾಗುವ ಸಂದರ್ಭದಲ್ಲಿ ಸಂವಿಧಾನದ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾದದ್ದೇ ಸದ್ಯಕ್ಕೆ ಮೋದಿ ಸರಕಾರ ಇದೆಯೆಂಬ ಕಾರಣಕ್ಕೆ. ಹೇಗೆ? ಹೇಳುತ್ತೇನೆ ಕೇಳಿ.
'೧೯೭೧ರಲ್ಲಿ ನಡೆದ ಚುನಾವಣೆ ಪಾರದರ್ಶಕವಾಗಿರಲಿಲ್ಲ. ಅದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ರಾಯ್ ಬರೇಲಿಯಲ್ಲಿ ಇಂದಿರಾಗಾಂಧಿ ಚುನಾವಣಾ ಪ್ರಚಾರಕ್ಕೆ ಸರಕಾರೀ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಚುನಾವಣಾ ಆಯೋಗ ನಿಗದಿಪಡಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ದುಡ್ಡನ್ನು ವಿನಿಯೋಗಿಸಿದ್ದಾರೆ. ಆಕೆಯ ಗೆಲುವನ್ನು ಅಸಿಂಧು ಎಂದು ಘೋಷಿಸಬೇಕು' ಎಂಬ ಬೇಡಿಕೆಯೊಂದಿಗೆ ಅದೇ ಕ್ಷೇತ್ರದಲ್ಲಿ ಆಕೆಯ ವಿರುದ್ಧ ಸ್ಪರ್ಧಿಸಿದ್ದ ರಾಜ್ ನಾರಾಯಣ್ ಕೋರ್ಟು ಮೆಟ್ಟಿಲು ಹತ್ತಿದರು. ಅಲಹಾಬಾದ್ ಹೈಕೋರ್ಟಿನಲ್ಲಿ ತಿಂಗಳುಗಟ್ಟಲೆ ವಿಚಾರಣೆ ನಡೆಯಿತು. ರಾಜ್ ನಾರಾಯಣ್ ಕೇವಲ ಆರೋಪ ಮಾಡಿದ್ದಲ್ಲ; ತನ್ನ ಪ್ರತಿ ಆರೋಪಕ್ಕೂ ತಕ್ಕ ಸಾಕ್ಷ್ಯಗಳನ್ನೂ ಒದಗಿಸಿದ್ದರಿಂದ ಪ್ರಕರಣಕ್ಕೆ ಬಲ ಬಂತು. ಶಾಂತಿ ಭೂಷಣ್, ರಾಜ್ ನಾರಾಯಣ್ ಪರವಾಗಿ ಕೋರ್ಟಿನಲ್ಲಿ ವಾದಿಸಿದರು. ವಾದ-ಪ್ರತಿವಾದಗಳನ್ನು ಸುದೀರ್ಘವಾಗಿ ಕೇಳಿದ ಕೋರ್ಟು ಕೊನೆಗೆ ೧೯೭೫ರ ಜೂನ್ ೧೨ರಂದು ಬೆಳಗ್ಗೆ ಹತ್ತು ಗಂಟೆಗೆ ಒಂದು ಮಹತ್ವದ ತೀರ್ಪು ಕೊಟ್ಟಿತು. ಅದರ ಪ್ರಕಾರ, "ಶ್ರೀಮತಿ ಇಂದಿರಾಗಾಂಧಿಯವರು ೧೯೭೧ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ ನಡೆಸಿರುವುದೂ ಸರಕಾರೀ ಅಧಿಕಾರಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡಿರುವುದೂ ನಿಗದಿಪಡಿಸಿದ ವೆಚ್ಚಕ್ಕಿಂತ ಹಲವುಪಟ್ಟು ಹೆಚ್ಚು ದುಡ್ಡನ್ನು ವ್ಯಯಿಸಿ ಚುನಾವಣೆ ಗೆದ್ದಿರುವುದೂ ಸಾಬೀತಾಗಿರುವುದರಿಂದ ಆಕೆ ಲೋಕಸಭೆಯಲ್ಲಿ ರಾಯ್ಬರೇಲಿಯ ಪ್ರತಿನಿಧಿಯಾಗಿ ಮುಂದುವರಿಯುವುದು ಸರಿಯಲ್ಲ ಎಂದು ನ್ಯಾಯಾಲಯ ಭಾವಿಸಿದೆ. ಆಕೆಯ ಸಂಸತ್ ಸದಸ್ಯತ್ವವನ್ನು ತಕ್ಷಣ ಅಸಿಂಧುಗೊಳಿಸಬೇಕು. ಚುನಾವಣಾ ಅಕ್ರಮ ನಡೆಸಿರುವ ವಿಷಯದಲ್ಲಿ ಆಕೆ ಕೋರ್ಟು ಹೇಳುವ ಶಿಕ್ಷೆ ಅನುಭವಿಸಲು ಸಿದ್ಧಳಾಗಬೇಕು" ಎಂದು ಹೇಳಲಾಯಿತು.
೧೯೭೫ರ ಜೂನ್ ೧೨ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ಇಂದಿರಾಗಾಂಧಿಯವರ ವಿರುದ್ಧ ಬಂದ ಬೆನ್ನಲ್ಲೇ ಜಯಪ್ರಕಾಶ ನಾರಾಯಣರು (ಜೆಪಿ) ಬಿಹಾರದಲ್ಲಿ ಆಕೆಯ ವಿರುದ್ಧ ಭಾಷಣ ಮಾಡಿದರು. "ಇಂದಿರಾಗಾಂಧಿ ಎಂದರೆ ಭ್ರಷ್ಟಾಚಾರದ ಮೂರ್ತರೂಪ. ಈ ದೇಶದಲ್ಲಿ ಪ್ರಧಾನಮಂತ್ರಿಯಾಗಿರುವವರೇ ಚುನಾವಣಾ ಅಕ್ರಮ ಮಾಡಿ ಗೆದ್ದುಬಂದ ಪ್ರಕರಣ ಹಿಂದೆ ನಡೆದಿರಲಿಲ್ಲ, ಮುಂದೆ ನಡೆಯಲೂಬಾರದು. ನಮ್ಮ ಪ್ರಜಾಪ್ರಭುತ್ವ ಇಂಥ ದುರವಸ್ಥೆಗೆ ಇಳಿದಿದೆ ಎಂದಾದರೆ ಇದಕ್ಕಿಂತ ಬ್ರಿಟಿಷರ ಆಡಳಿತವೇ ನೂರು ಪಟ್ಟು ಚೆನ್ನಾಗಿತ್ತೆಂದು ಜನರು ಭಾವಿಸುವಂತಾಗುತ್ತದೆ. ಹಾಗಾಗಿ, ತನ್ನ ಹುದ್ದೆಗೆ ಕಳಂಕ ಮೆತ್ತಿಕೊಳ್ಳುವಂತೆ ಮಾಡಿದ ಇಂದಿರಾಗಾಂಧಿ ಪ್ರಧಾನಿಪೀಠದಿಂದ ಇಳಿಯಬೇಕು" ಎಂದು ಜೆಪಿ ವೇದಿಕೆಯ ಮೇಲಿಂದ ಹೇಳಿದರು. ಇದು ದೊಡ್ಡ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿತು. ಇಂದಿರಾಗಾಂಧಿಯ ಸುತ್ತ ನ್ಯಾಯಾಂಗದ ಕುಣಿಕೆಗಳು ದಿನದಿನಕ್ಕೂ ಬಿಗಿಯಾಗತೊಡಗಿದವು. ಸುದ್ದಿಪತ್ರಿಕೆಗಳು ಇಂದಿರಾ ರಾಯ್ಬರೇಲಿಯಲ್ಲಿ ಎಂತೆಂಥ ಅಕ್ರಮಗಳನ್ನು ಚುನಾವಣೆ ಸಂದರ್ಭದಲ್ಲಿ ಮಾಡಿದರು ಎಂಬುದನ್ನು ವಿವರವಾಗಿ ಪ್ರಕಟಿಸತೊಡಗಿದವು. ಭಾರತದಲ್ಲಿ ಅದುವರೆಗೆ ಪ್ರಧಾನಿಯೊಬ್ಬರು ಚುನಾವಣಾ ಅಕ್ರಮದ ಆರೋಪ ಹೊತ್ತು ರಾಜೀನಾಮೆ ಕೊಟ್ಟು ಅಧಿಕಾರತ್ಯಾಗ ಮಾಡಿದ ಪ್ರಕರಣ ನಡೆದಿರಲಿಲ್ಲ. ಈಗ ಇಂದಿರಾ ಅಂಥದೊಂದು ಕ್ರಮಕ್ಕೆ ಮುಂದಾಗಿ ಇತಿಹಾಸ ಸೃಷ್ಟಿಸಬೇಕಿತ್ತು. ನೆಹರೂ ಮಗಳು ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಏಕಮೇವ ನಾಯಕಿ ಎಂದು ಕರೆಸಿಕೊಂಡಿದ್ದ ಇಂದಿರೆಗೆ ಈ ಅವಮಾನವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟದ ಮಾತಾಗಿತ್ತು. ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಪೀಠತ್ಯಾಗ ಮಾಡಬೇಕಾದ ಅನಿವಾರ್ಯತೆ ಇಂದಿರಾಗೆ ಸೃಷ್ಟಿಯಾಯಿತು. ಆದರೆ ಅಷ್ಟು ಬೇಗ ನ್ಯಾಯಕ್ಕೆ ಬಗ್ಗುವವರೇ ಆಕೆ? ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹಾಕಿದರು. ಪ್ರಸಿದ್ಧ ವಕೀಲ ನಾನೀ ಪಾಲ್ಖೀವಾಲ ಇಂದಿರೆಯ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿದರು. ಆಕೆ ಸಂಸದ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಿಲ್ಲ; ಆದರೆ ಸಂಸದಳಾಗಿ ಯಾವುದೇ ನಿರ್ಣಯಕ್ಕೆ ಮತ ಹಾಕುವ ಅಧಿಕಾರ ಆಕೆಗೆ ಇರುವುದಿಲ್ಲ ಎಂಬ ರಾಜಿ ಸೂತ್ರದಂತಿದ್ದ ಅನುಕೂಲಸಿಂಧು ತೀರ್ಪೊಂದು ಸರ್ವೋಚ್ಚ ನ್ಯಾಯಾಲಯದಿಂದ ಬಂತು.
ಜೂನ್ ೨೦ರಂದು, ಇಂದಿರಾ, ತನ್ನ ಶಕ್ತಿಪ್ರದರ್ಶನ ಮಾಡಲು ಆರಿಸಿಕೊಂಡದ್ದು ದೆಹಲಿಯ ಬೋಟ್ ಕ್ಲಬ್ ಮೈದಾನವನ್ನು. ಕಾರ್ಯಕ್ರಮಕ್ಕೆ ಜನರನ್ನು ಸಿಕ್ಕ ಸಿಕ್ಕ ಬಸ್ಸುಲಾರಿಗಳಲ್ಲಿ ತುಂಬಿಸಿ ಕರೆತರಲಾಯಿತು. ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ ಎಂಬ ಘೋಷಣೆಯನ್ನು ಸಾವಿರಾರು ಮಂದಿಯಿಂದ ಮಂತ್ರಘೋಷದಂತೆ ಕೂಗಿಸಲಾಯಿತು. ಆ ಮೂಲಕ ಇಡೀ ದೇಶಕ್ಕೆ ಒಂದು ಬಗೆಯ ಹಿಸ್ಟೀರಿಯಾ ಹುಟ್ಟಿಸಿಬಿಡಬೇಕೆಂದು ಇಂದಿರಾ ಯೋಚಿಸಿದ್ದರು. ಆ ಕಾರ್ಯಕ್ರಮದಲ್ಲಿ ಆಕೆ ಒಂದು ತಾಸು ಭಾಷಣ ಮಾಡಿ ತಾನು ನಿರಪರಾಧಿ, ತನ್ನನ್ನು ಅನ್ಯಾಯವಾಗಿ ಪ್ರಕರಣಗಳಲ್ಲಿ ಸಿಕ್ಕಿಸಲಾಗಿದೆ, ತಾನು ಪರಮಪವಿತ್ರಳು, ಪ್ರಾಮಾಣಿಕ ರಾಜಕಾರಣಿ ಎಂದು ತನ್ನ ಗಂಟೆಯನ್ನು ತಾನೇ ಹೊಡೆದುಕೊಂಡರು. ಈ ಕಾರ್ಯಕ್ರಮವನ್ನು ದೂರದರ್ಶನ ಮುಕ್ಕಾಲು ತಾಸು ತೋರಿಸಿತು!
ಅದಾಗಿ ಐದು ದಿನಗಳಲ್ಲಿ ಜೆಪಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತಾಡಿದರು. ಕಾರ್ಯಕ್ರಮಕ್ಕೆ ಜೆಪಿ ಬರದಂತೆ ಮಾಡಲು ಕಾಂಗ್ರೆಸ್ ಕೊಟ್ಟಕೊನೆಯ ಕ್ಷಣದವರೆಗೂ ಇನ್ನಿಲ್ಲದಂತೆ ಯತ್ನಿಸಿತು. ಆದರೆ ಜೆಪಿಯವರನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಜನರೇ ಹೊತ್ತು ತಂದು ವೇದಿಕೆಯಲ್ಲಿ ಕೂರಿಸಿದರು. ಜೆಪಿ ಆ ಸಮಾವೇಶದಲ್ಲಿ ಇಂದಿರೆಯ ದುರಾಡಳಿತವನ್ನು ಕಣ್ಣಿಗೆ ಕಟ್ಟುವಂತೆ ಜನರಿಗೆ ವಿವರಿಸಿದರು. ಆಕೆಯ ಭ್ರಷ್ಟ ಆಡಳಿತದ ಬಗ್ಗೆ ಹರಿಹಾಯ್ದರು. ಸಂಪೂರ್ಣ ಕ್ರಾಂತಿಯ ಆಶಯವನ್ನು ಮತ್ತೆ ಜನರ ಮನಸ್ಸುಗಳಲ್ಲಿ ಗಟ್ಟಿಗೊಳಿಸಿದರು. ಅತ್ತ ಅವರ ಭರ್ಜರಿ ಭಾಷಣಕ್ಕೆ ಕಿವಿಗಡಚಿಕ್ಕುವ ಕರತಾಡತಗಳಿಂದ ಮೈದಾನ ಹುಚ್ಚೆದ್ದು ಕುಣಿಯುತ್ತಿದ್ದರೆ ಇತ್ತ ಇಂದಿರಾ ತನ್ನ ಪರಮಾಪ್ತರನ್ನು ಕೂರಿಸಿಕೊಂಡು ವಿರೋಧಿಗಳಿಗೆ ಸರ್ಜರಿ ಮಾಡಲು ಮಂತ್ರಾಲೋಚನೆಯಲ್ಲಿ ತೊಡಗಿದ್ದರು. ಆಕೆಯ ಸುತ್ತ ಕೂತಿದ್ದ ವ್ಯಕ್ತಿಗಳಲ್ಲಿ ಒಬ್ಬರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ. ಅವರು ಸಂವಿಧಾನದ ೩೫೨ನೆಯ ವಿಧಿಯ ಕಡೆ ಇಂದಿರೆಯ ಗಮನ ಸೆಳೆದರು. ದೇಶ ಆಂತರಿಕವಾಗಿ ಅಥವಾ ಬಾಹ್ಯಶಕ್ತಿಗಳಿಂದ ಗಂಭೀರವಾದ ಅಪಾಯ ಎದುರಿಸುವ ಸಂದರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಪರಿಸ್ಥಿತಿಯ ಸಂಪೂರ್ಣ ಹಿಡಿತವನ್ನು ಪ್ರಧಾನಿ ತನ್ನ ಕೈಗೆ ತೆಗೆದುಕೊಳ್ಳಬಹುದು ಎಂಬುದು ಈ ವಿಧಿಯ ಸಾರಾಂಶ. ದೇಶಕ್ಕೆ ವಿದ್ಯುದಾಘಾತ ಕೊಡಲು ಬಯಸಿದ್ದ ನಾಯಕಿಗೆ ಇಷ್ಟೇ ಸಾಕಾಯಿತು! ದೇಶವನ್ನು ಲೋಹದ ತಂತಿಗಳಿಂದ ಬಂಧಿಸಿ ತುರ್ತು ಪರಿಸ್ಥಿತಿಯೆಂಬ ವಿದ್ಯುತ್ ಚೇರಿಗೆ ಕಟ್ಟಿಹಾಕಲು ಉದ್ಯುಕ್ತರಾದರು ಇಂದಿರಾ. ಕಾಗದಪತ್ರಗಳು ಮಿಂಚಿನ ವೇಗದಲ್ಲಿ ತಯಾರಾದವು. ಎರಡು ಕ್ಯಾಬಿನೆಟ್ ಮೀಟಿಂಗ್ಗಳಾದವು. ಯಾರಿಗೂ ಯಾವ ಅಭಿಪ್ರಾಯವನ್ನೂ ಹೇಳಲು ಅವಕಾಶವಿರಲಿಲ್ಲ; ಎಲ್ಲರೂ ಮಾಡಬೇಕಿದ್ದದ್ದು ಅಧಿನಾಯಕಿಯ ಮಾತುಗಳಿಗೆ ತೆಪ್ಪಗೆ ಗೋಣಾಡಿಸುವುದು ಮಾತ್ರ. ಅಸಲಿಗೆ ಅವರಲ್ಲಿ ಅನೇಕರಿಗೆ ತುರ್ತು ಪರಿಸ್ಥಿತಿ ಎಂದರೆ ಹೇಗಿರುತ್ತದೆಂಬುದರ ಅಂದಾಜೂ ಇರಲಿಲ್ಲ. ಕೆಲವು ದಿನಗಳ ಮಟ್ಟಿಗೆ ದೇಶದಲ್ಲಿ ಖಡಕ್ ನೀತಿಪಾಲನೆ; ವಿರೋಧಿಗಳ ನಿಯಂತ್ರಣ - ಇಷ್ಟೇ ಅವರ ತಲೆಯಲ್ಲಿದ್ದದ್ದು. ಆದರೆ ಅಂದು ರಾತ್ರಿಯೇ ದೇಶದಲ್ಲಿ ಒಂದು ಬೃಹದಾಕಾರದ ಫ್ರಾಂಕನ್ಸ್ಟೈನ್ ಭೂತ ಎದ್ದುನಿಲ್ಲುತ್ತದೆ ಎಂಬುದು ಅವರ ತಲೆಯಲ್ಲಿರಲಿಲ್ಲ.
ಜೂನ್ ೨೫ರ ರಾತ್ರಿ ಹತ್ತು ಗಂಟೆಯ ಹೊತ್ತಿಗೆ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಆದೇಶದ ಪ್ರತಿ ರಾಷ್ಟ್ರಪತಿ ಭವನಕ್ಕೆ ಹೋಯಿತು. ಸ್ವತಃ ಇಂದಿರಾ, ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ರನ್ನು ಭೇಟಿಯಾಗಿ ತುರ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ಕೊಟ್ಟರು. ರಾಷ್ಟ್ರಪತಿಗಳಿಗಾದರೋ ಈ ಸನ್ನಿವೇಶ ಅದೆಷ್ಟು ದೊಡ್ಡದು ಎಂಬ ತಿಳಿವಳಿಕೆ ಇತ್ತೋ ಇಲ್ಲವೋ! 'ಸರಕಾರ ಪ್ರಕಟಪಡಿಸಲಿಚ್ಛಿಸದ ಶಕ್ತಿಗಳಿಂದ ದೇಶದ ಭದ್ರತೆಗೆ ಅಪಾಯವಿರುವುದರಿಂದ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸುತ್ತಿದ್ದೇನೆ' ಎಂದು ಹೇಳುವ ಸುಗ್ರೀವಾಜ್ಞೆ ಪತ್ರಕ್ಕೆ ರಾಷ್ಟ್ರಪತಿ ಸಹಿ ಹಾಕಬೇಕಿತ್ತು. ಆ ಮುಖ್ಯ ವಿಧಿ ಪೂರ್ಣಗೊಂಡ ಅರ್ಧಗಂಟೆಯೊಳಗಾಗಿ ದೇಶದ ಪ್ರಮುಖ ಅಧಿಕಾರಗಳೆಲ್ಲ ಇಂದಿರಾ ಕೈಯೊಳಗೆ ಬಂದವು. ರಾತ್ರೋರಾತ್ರಿ ಜಯಪ್ರಕಾಶ ನಾರಾಯಣರನ್ನು ಬಂಧಿಸಿ ಎಳೆದೊಯ್ಯಲಾಯಿತು. ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಮಧು ದಂಡವತೆ, ಲಾಲ್ಕೃಷ್ಣ ಅಡ್ವಾಣಿ, ಪ್ರೊಫೆಸರ್ ಸಮರ್ ಗುಹಾ ಮುಂತಾದ ಪ್ರಮುಖ ವ್ಯಕ್ತಿಗಳನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ೧೨ ತಾಸುಗಳೊಳಗಾಗಿ ಬಂಧಿಸಿ ಜೈಲಿಗಟ್ಟಲಾಯಿತು. ಇಂದಿರೆಗೆ ದೊಡ್ಡ ಕಂಟಕವಾಗಿ, ದುಃಸ್ವಪ್ನವಾಗಿ ಕಾಡುತ್ತಿದ್ದ ಮತ್ತೀಗ ಭೂಗತರಾಗಿದ್ದ ಜಾರ್ಜ್ ಫೆರ್ನಾಂಡಿಸ್ರನ್ನು ಬಂಧಿಸಲು ಪೊಲೀಸರು ದೇಶಾದ್ಯಂತ ಜಾಲ ರೂಪಿಸಿದರು. ಅವರ ಇರವಿನ ಮಾಹಿತಿ ಪಡೆಯಲು ಸೋದರರಿಗೆ ಚಿತ್ರಹಿಂಸೆ ಕೊಟ್ಟರು.
ಮುಂದಿನ ಕೆಲವು ದಿನಗಳಲ್ಲಿ ದೇಶದ ಸಂವಿಧಾನ ಹಿಂದೆಂದೂ ಕಾಣದಂಥ ವಿರೂಪಕ್ಕೆ ತುತ್ತಾಯಿತು. ಹತ್ತು ಹಲವು ವಿಧಿಗಳನ್ನು ತಿದ್ದಲಾಯಿತು, ಮಿಕ್ಕ ಒಂದಷ್ಟನ್ನು ಸೇರಿಸಲಾಯಿತು. ಎಲ್ಲ ಕಾನೂನು ಕೋಳಗಳಿಂದ ಪ್ರಧಾನಿ ಮತ್ತು ರಾಷ್ಟ್ರಪತಿಯನ್ನು ಹೊರಗಿಡಲಾಯಿತು! ಪ್ರಧಾನಿಯ ಮೇಲೆ ಯಾವ ಕೋರ್ಟಲ್ಲೂ ಯಾರೂ ಯಾವ ಕಾರಣಕ್ಕೂ ವ್ಯಾಜ್ಯ ಹೂಡಲು ಅಧಿಕಾರವಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ತುರುಕಲಾಯಿತು! (ಮೇಡಂ ಚೌಧರಿ! ಓದ್ಕಳಿ ಈ ಸಾಲು!) ಸಂಸತ್ತಿನ ಕಲಾಪಗಳಿಗೆ ಅರ್ಥವೇ ಉಳಿಯಲಿಲ್ಲ; ಯಾಕೆಂದರೆ ಕೋರಂ ಕೊರತೆ ಇದ್ದರೂ ಬೆರಳೆಣಿಕೆಯಷ್ಟು ಮಂದಿ ಒಟ್ಟು ಕೂತು ಸಂವಿಧಾನಕ್ಕೆ ಯಾವ ತಿದ್ದುಪಡಿಯನ್ನೂ ಮಾಡಬಹುದು ಎಂಬ ಹೊಸ ನಿಯಮ, ವಿಧಾನ ರೂಪುಪಡೆಯಿತು. ರಾಜ್ಯಗಳಲ್ಲಿ ಹೈಕೋರ್ಟುಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವಂತೆ ಸೂಚನೆ ಹೋಯಿತು. ರಾಜ್ಯ ಸರಕಾರಗಳು ಈ ತುರ್ತು ಪರಿಸ್ಥಿತಿಯಲ್ಲಿ ಮತ್ತು ಇಂದಿರಾ ನಾಯಕತ್ವದಲ್ಲಿ ತಮಗೆ ಸಂಪೂರ್ಣ ನಂಬಿಕೆ ಇದೆ ಎಂಬ ಬೇಷರತ್ ಬೆಂಬಲ ಪತ್ರವನ್ನು ಕಳಿಸಬೇಕಾಯಿತು. ಕಾಂಗ್ರೆಸ್ನ ಆಡಳಿತವಿರದಿದ್ದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಬಂತು. ಸಂವಿಧಾನದ ಮೂಲ ಪ್ರಸ್ತಾವನೆ (ಪ್ರಿಯಾಂಬ್ಲ್)ಯನ್ನು ಬದಲಾಯಿಸಿ ಅಲ್ಲಿ ಸೋಷಲಿಸ್ಟ್ ಮತ್ತು ಸೆಕ್ಯುಲರ್ ಎಂಬೆರಡು ಹೊಸ ಪದಗಳನ್ನು ಸೇರಿಸಲಾಯಿತು.
ದೇಶ ಕಂಡ ಅತ್ಯಂತ ಪಾಶವೀ ಕಾಯ್ದೆಗಳಲ್ಲಿ ಒಂದು ಮೀಸಾ (ಮೆಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯುರಿಟಿ ಆಕ್ಟ್). ದೇಶದಲ್ಲಿ ಯಾರನ್ನೇ ಆಗಲಿ, ಆಂತರಿಕ ಭದ್ರತೆಗೆ ಧಕ್ಕೆ ತರಬಹುದು ಎಂಬ ಶಂಕೆಯ ಮೇಲೆ ಬಂಧಿಸಿ ಜೈಲಿಗೆ ತಳ್ಳುವ, ವಿಚಾರಣೆಗೊಳಪಡಿಸುವ, ಅನಿರ್ದಿಷ್ಟಾವಧಿಗೆ ತನ್ನ ಸುಪರ್ದಿಯಲ್ಲಿ ಉಳಿಸಿಕೊಳ್ಳುವ ಹಕ್ಕನ್ನು ಕೇಂದ್ರ ಸರಕಾರ ಈ ಕಾಯ್ದೆಯ ಮೂಲಕ ಸಂಪಾದಿಸಿತು. ಮೀಸಾ ಪ್ರಸ್ತಾಪವಾದಾಗ ಅದನ್ನು ತೀವ್ರವಾಗಿ ಖಂಡಿಸಿದವರಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಪ್ರಮುಖರು. ಆದರೆ ಅವರ ಅಭಿಪ್ರಾಯಗಳನ್ನು ಗಾಳಿಗೆ ತೂರಿ ಮೀಸಾ ಸಂಸತ್ತಿನಲ್ಲಿ ಅನುಮೋದನೆ ಪಡೆಯುವಂತೆ ನೋಡಿಕೊಳ್ಳಲಾಯಿತು. ಮೂರನೇ ಎರಡು ಬಹುಮತವಿದ್ದ ಸರಕಾರ ತನಗೆ ಬೇಕಾದ ಯಾವ ಕಾಯ್ದೆಯನ್ನಾದರೂ ಮಂಡಿಸಿ ಅನುಷ್ಠಾನಕ್ಕೆ ತರುವ ಶಕ್ತಿ ಪಡೆದಿತ್ತಲ್ಲ? ಮೀಸಾ ಕರಡು ಸಂಸತ್ತಿನಲ್ಲಿ ಕಾಯ್ದೆಯಾಗಿ ಅನುಮೋದನೆಗೊಂಡಾಗ ವಾಜಪೇಯಿಯವರು, "ಇದು ಈ ದೇಶದಲ್ಲಿ ಪೊಲೀಸ್ ರಾಜ್ಯ ಪ್ರಾರಂಭವಾಗುತ್ತಿರುವ ಸೂಚನೆ. ಇದು ಮುಂದೆ ದೇಶದ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತೆಗೆ ಕಪ್ಪುಚುಕ್ಕಿಯಾಗಲಿದೆ. ಮೀಸಾ ಕಾಯ್ದೆ ದೇಶದಲ್ಲಿ ಸರ್ವಾಧಿಕಾರದ ಪ್ರಾರಂಭಕ್ಕೆ ಸಿಗುತ್ತಿರುವ ಪರವಾನಿಗೆ" ಎಂದು ಸರಿಯಾಗಿಯೇ ಊಹಿಸಿದ್ದರು. ಅಡ್ವಾಣಿಯವರು, "ಮೀಸಾ ಕಾಯ್ದೆಯನ್ನು ಸರಕಾರ ಮೊದಲು ಪ್ರಯೋಗ ಮಾಡುವುದೇ ಮೊರಾರ್ಜಿ ದೇಸಾಯಿಯವರ ಮೇಲೆ" ಎಂದೂ ಭವಿಷ್ಯ ನುಡಿದಿದ್ದರು! ಹಾಗೇ ಆಯಿತು! ಎಮರ್ಜೆನ್ಸಿಯ ೨೧ ತಿಂಗಳ ಅವಧಿಯಲ್ಲಿ ಸರಕಾರದಿಂದ ಯಾವುದೇ ವಿಚಾರಣೆ ಇಲ್ಲದೆ ಜೈಲಿಗೆ ತಳ್ಳಲ್ಪಟ್ಟವರ ಸಂಖ್ಯೆ ೧,೪೦,೦೦೦! ಕರ್ನಾಟಕದಲ್ಲಿ ಈ ಸಂಖ್ಯೆ ೧೧,೦೦೦ಕ್ಕೂ ಹೆಚ್ಚು.
ಇಷ್ಟೆಲ್ಲಾ...... ಆದದ್ದು ಇಂದಿರೆಯನ್ನು ಕೋರ್ಟು 'ತಪ್ಪಿತಸ್ಥರು' ಎಂದು ಗುರುತಿಸಿ ಶಿಕ್ಷೆ ಪ್ರಕಟಿಸಿತು ಎಂಬ ಕಾರಣಕ್ಕೆ!! ಈಗ ಹೇಳಿ, ಈಗೇನಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದು, ನ್ಯಾಯಾಲಯವೊಂದು ರಾಹುಲ್ ವಿರುದ್ಧ ತೀರ್ಪು ಕೊಟ್ಟಿದ್ದರೆ.... ಈಗ ಇದನ್ನು ಬರೆಯಲು ನನಗೂ, ಓದಲು ನಿಮಗೂ ಅವಕಾಶವೇ ಇರುತ್ತಿರಲಿಲ್ಲ; ಯಾಕೆಂದರೆ ನಾವೆಲ್ಲ ತುರ್ತು ಪರಿಸ್ಥಿತಿಯ ನೆಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುತ್ತಿದ್ದೆವಲ್ಲ!