05/09/2025
ಗೋಡೆಗೆ ತೂಗಿದ ಅಂಕಲಿಪಿ ಪಠ.
ಜೊತೆಗೆ ಬೈಗುಳದ ಒಟ ಒಟ.
ತಲೆ ಗುಂಗಾಗಿ ಯಾರಿಗೆ ಬೇಕಿತ್ತು ಈ ಪಾಠ.
ತೊದಲು ಬಿಳುತ್ತಿತ್ತು ಚಟಾ ಚಟಾ.
ಬಡತನದ ಬೇಗೆಯ ಹಗೆ,
ತೀರುತ್ತಿತ್ತು ನಮ್ಮಮೇಲೆ ಹಾಗೆ.
ಕಾಣುತ್ತಿದ್ದಳು ನಮಗೆ ಕೂಗುವ ಕಾಗೆ.
ಗೊತ್ತಿರಲಿಲ್ಲ ಅವಳು ಬಿತ್ತುತ್ತಿದ್ದಳು ಅಕ್ಷರದ ಅಗೆ.
ನಗುವಿಲ್ಲ ನಲಿವಿಲ್ಲ, ತಲೆಯೆಲ್ಲ ಚಿತ್ತಾರ.
ಹೋಗದ ತಲೆಯಲ್ಲಿ ಏನು ಹಾಕಿದರು ವಿಸ್ತಾರ.
ಕಿಳರಿಮೆಗೆ ಕಾಲರಿವೆಯಂತೆ ಹಿಂಸೆ.
ಆದರು ಕಲಿತೆ ಬದುಕಿ ಪ್ರಶಂಸೆ. 🔴
ಗೋಡೆಯ ಮೇಲೆ ಅ ಆ ಇ ಈ ಪಠ, ಅದರ ಪಕ್ಕದಲ್ಲಿ ಒಂದು ಎರಡು ಅಂಕಿ ಸಂಖ್ಯೆಯ ಪಠ ಅದಕ್ಕೊಂದು ಕೆತ್ತಿ ರೆಡಿ ಮಾಡಿದ ಕೋಲು. ಎದುರಿಗೆ ತಲೆಗೆ ಹೋಗದ ಮಂಕು ತಲೆಬುರುಡೆ. ಮಧ್ಯದಲ್ಲಿ ನಮ್ಮ ಆಯಿ. ಕೋಲು ಹಿಡಿದು ಚಂಡಿಯೋ, ಮಹಾ ಕಾಳಿಯೋ ಅನ್ನುವ ಅನುಮಾನವಾದರು ಹೆಸರು ಭವಾನಿ. ಕೂಲಲ್ಲಿ ಹೊಡಿಬೇಡ ನೋವಾಗತ್ತೆ ಅನ್ನುವ ನಮ್ಮದಾದನ ಕೂಗಿಗೆ ಹಿತ್ತಲಿನಿಂದ ಆರಿಸಿ ಆರಿಸಿ ತರುತ್ತಿದ್ದ ತೆಳ್ಳಗಿನ ಸೆಳೆಯಾದರೂ ಹೊಡೆತ ಬಿದ್ದಾಗ ಮುದುಡಿಕೊಳ್ಳುವಾಗ ನವ ರಂಧ್ರಗಳು ಒಮ್ಮೆಲೆ ಬಿಗಿಯಾಗಿ ಮುಚ್ಚಿಕೊಳ್ಳುತ್ತಿದ್ದವು. ಜಾಸ್ತಿಯಾದಾಗ ಅಜ್ಜಿಯ ಹಿಂದೆ ಅಡಗಲು ಹೊದಾಗ ಅಜ್ಜಿಗೆ ಪ್ರದಕ್ಷಿಣೆ ಹಾಕಿದಂತೆ ಸುತ್ತುವರೆಯ ಬೇಕಿತ್ತು. ಅವಳೇನು ಅ ಆ ಇ ಈ ಮಾತ್ರ ಕಲಿಸಿಲ್ಲ ರಾಮಾಯಣ , ಮಹಾಭಾರತ ಕಥೆ ಉಪಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ಪುಸ್ತಕ ಹಿಡಿದು ಓದಿ ಹೇಳುವಾಗ ಮಾತ್ರ ಕಿವಿ ತಂಪಾಗುತ್ತಿತ್ತು. ಹಾಗಾಗಿಯೇ ಸ್ವಲ್ಪ ಅದರ ಬಗೆಗಿನ ಜ್ಞಾನ ಇದ್ದುದು ಮುಂದೆ ಕಲಿಯುವಾಗ ಸಹಾಯವಾಯಿತು. ಅದರಿಂದ ಹೈಸ್ಕೂಲ್ ನಲ್ಲಿ ರಾಮಾಯಣ ಕುರಿತು ಖಾಸಗಿ ಸಂಸ್ಥೆಯೊಂದು ಮಾಡುವ ಪರೀಕ್ಷೆಯಲ್ಲಿ ತಂಗಿಗೆ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕವು ಬಂದಿತ್ತು.
ಹಾಗೆ ದಾದ ಕಲಿಸಿದ ಭಜನೆ, ವಕೃತುಂಡಾ ಮಹಾಕಾಯ ಶ್ಲೋಕ ಬೆಳಿಗ್ಗೆಮತ್ತು ಸಂಜೆ ದೇವರ ಬೇಡಿಕೆಯಾಗಿತ್ತು. ಎಲ್ಲೋ ಒಂದು ಕಡೆ ಒಳ್ಳೆಯ ಬುನಾದಿಯೇನೋ ಬಿದ್ದಿತ್ತು. ಆದರೆ ಓದಿದಿನಿ ನಿಜ ಸರಿಯಾಗಿ ಓದದಿರುವುದು ನನ್ನ ತಪ್ಪೆ.
ಅದೊಂದು ದಿನ ಸಣ್ಣ ಸಣ್ಣ ಮಕ್ಕಳೆಲ್ಲ ಸೈಕಲ್ ಕಲಿತರು ನೀ ಯಾಕೆ ಹೆದರ್ತೆ, ಸೈಕಲ್ ಮುಟ್ಟೋದಿಲ್ಲ ಅಂತ ಮೊಳಕಂಡೆ ಮೇಲೆ ಬಿದ್ದ ದಾದನ ಏಟಿಗೆ ಆ ಕೋಲು ಮೂರುಪೀಸ್ ಆಗಿತ್ತು. ಅದೇ ದಿನ ಸಂಜೆಯೋಳಗೆ ಸೈಕಲ್ ಕಲಿತು ಅವರ ಮುಂದೆ ಹೊಡೆದು ತೋರಿಸಿದ್ದೆ. ಓದುಲು ಹಿಂದಿದ್ದರು ಎಂದಿಗೂ ಮಧ್ಯಂತರದ ಮೇಲೆ ಉತ್ತೀರ್ಣನಾಗುತ್ತಿದ್ದೆ. ಆದರೆ ಅದಕ್ಕಿಂತ ಹೆಜ್ಜಿನದು ಕಲಿಯುವ ಮತ್ತು ಅರ್ಥಿಕೊಳ್ಳುವ, ಅದನ್ನ ಕಾರ್ಯಗತವಾಗಿ ಜೀವನಕ್ಕೆ ರೂಪಿಸಿಕೊಳುವ ಶಕ್ತಿ ತುಂಬಾ ಕಲಿತಿದಿನಿ.
ಈ ಶಕ್ತಿ ಬೆಳೆಸಿದ ಪ್ರತಿ ಗುರುಗಳಿಗೂ ನಮನಗಳು. ಎಲ್ಲರಿಗೂ ಶಿಕ್ಷಕ ದಿನಾಚರಣೆಯಶುಭಾಶಯಗಳು. 🙏
ಹಿಯಾಳಿಸಿ, ಕಿರಿಕಿರಿ ಮಾಡಿ, ಆತ್ಮಸ್ಥೈರ್ಯ ಕುಗ್ಗಿಸಿ, ಕಲೆಳೆದವರಿಗೆಲ್ಲರಿಗೂ ನಮನಗಳು. ಯಾಕೆಂದರೆ ಹಿಂದೆ ಎಳೆದ ವಸ್ತುಗಳೇ ಮುಂದಕ್ಕೆ ಚಲಿಸುವುದು.😜 ಪ್ರತಿಹಂತದಲ್ಲೂ ನನಗೆ ಒಳ್ಳೆಯದೇ ಆಗಿದೆ. ಹಾಗಾಗಿಯಾರ ಮೇಲೂ ಬೇಸರವಾಗಲಿ ಮತ್ಸರವಾಗಲಿ ಕಂಡಿತಾ ಇಲ್ಲ.😊 ಒಂದಕ್ಷರ ಕಲಿಸಿದವರು ಗುರುಗಳು ಹಾಗಾಗಿ, ನೀವುಗಳು ಕೂಡಾ ನಮ್ಮ ದೊಡ್ಡ ಗುರುಗಳು. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಸರ್ವಪಲ್ಲಿ ರಾಧಾಕೃಷ್ಣ ಅವರ ಹೆಸರಲ್ಲಿ ಆಚರಿಸುವ ಶಿಕ್ಷಕರದಿನಾಚರಣೆಯ ಶುಭಾಶಯಗಳು.
-AKNK